ಈಶ ಗಿರೀಶ ನರೇಶ ಪರೇಶ ಮಹೇಶ ಬಿಲೇಶಯಭೂಷಣ ಭೋ|
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್||
ಆಹಾ… ಶಿವನ ಧ್ಯಾನಿಸುವುದರಲ್ಲಿ ಸಿಗುವ ಆನಂದಕ್ಕೆ ಎಲ್ಲೆಯುಂಟೆ. ಕಣ್ಣುಮುಚ್ಚಿ ಶಿವನನ್ನು ಧ್ಯಾನಿಸಿ, ಕಣ್ಣು ತೆರೆದರೆ ಕೆಂಪು ಹೂವಿನ ರಾಶಿಯಲ್ಲಿ ಶಿವನೂ ತನ್ಮಯತೆಯಿಂದ ಕಣ್ಣು ಮುಚ್ಚಿ ಕೂತಿರಬಹುದೇ ಅನಿಸುತ್ತದೆ. ಶಿವನಿಗೆ ಈ ಹೂವೆಂದರೆ ಅಷ್ಟೊಂದು ಪ್ರಿಯ.
ಶಿವನ ಪಾದ ಸೇರಲೆಂದೇ ಬಿಡುವ ಹೂವು ಯಾವುದೆಂದಿರಾ? ಅದೇ ಕೇಪಳ. ಹೌದು, ಗೊಂಚಲು ಗೊಂಚಲಾಗಿರುವ, ಕೈತೋಟ, ಕಾಡು-ಗುಡ್ಡಗಳಲ್ಲಿ ಯತೇಚ್ಛವಾಗಿ ಬೆಳೆಯುವ ಈ ಹೂವು ಎಲ್ಲರ ಮನ ಸೆಳೆಯುತ್ತದೆ.
ಕನ್ನಡದಲ್ಲಿ ಕೇಪುಳ ಅಥವಾ ಗುಡ್ಡಾ ದಾಸಲಾ, ಕೊಂಕಣಯಲ್ಲಿ ಪಟ್ಕಾಲಿ ಅಥವಾ ಪೊಡ್ಕಲಿ, ಮಲಯಾಳಂನಲ್ಲಿ ಸೆಕ್ಕಿ ಅಥವಾ ಚೆಟ್ಟಿ, ತೆಲುಗಿನಲ್ಲಿ ಬಂಧುಕಾ ಅಥವಾ ಬಂಧು ಜೀವಕಮು, ಇಂಗ್ಲೀಷಿನಲ್ಲಿ ಜಂಗಲ್ ಜರೇನಿಯಮ್ ಅಥವಾ ಜಂಗಲ್ ಫ್ಲೇಮ್ ಎಂದು ಕರೆಸಿಕೊಳ್ಳುವ ಈ ಹೂವು ಬಾಗಶಃ ಜಗತ್ತಿನ ಎಲ್ಲಾ ಭಾಗಗಳಲ್ಲೂ ನೋಡ ಸಿಗುತ್ತದೆ. ಭಾರತ, ಶ್ರೀಲಂಕಾ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್ ಮತ್ತು ಥೈಲ್ಯಾಂಡ್ನಲ್ಲಿ ಕೇಪುಳವನ್ನು ವ್ಯಾಪಕವಾಗಿ ಬೆಳೆಯುತ್ತಾರೆ.

ಕೇಪುಳ ಗಿಡದ ವೈಜ್ಞಾನಿಕ ಹೆಸರು ಇಕ್ಸೋರ ಕೊಸಿನಿಯ (ಲಿನ್). ಇದು ರುಬಿಯಾಸಿಯ ವರ್ಗಕ್ಕೆ ಸೇರಿದ್ದಾಗಿದ್ದು ಸುಮಾರು ಐದು ನೂರು ಪ್ರಭೇದಗಳಿದ್ದರೂ ಬೆರಳೆಣಿಕೆಯಷ್ಟನ್ನು ಮಾತ್ರ ಬೆಳಸಲಾಗುತ್ತದೆ. ಇದು ಸಾವಯವ ಪದಾರ್ಥಗಳಿಂದ ಸಮೃದ್ಧವಾಗಿರುವ ಬೆಳಕು ಚೆನ್ನಾಗಿ ರುವ, ಫಲವತ್ತಾದ, ಆಮ್ಲ ಮಣ್ಣಿನಲ್ಲಿ ಬೆಚ್ಚಗಿನ ಹವಾಮಾನದಲ್ಲಿ ಪ್ರಾಕೃತಿಕವಾಗಿ ಬೆಳೆಯುತ್ತದೆ. ಇದನ್ನು ಮನೆಯ ಒಳಗೂ ಮಡಕೆ, ಕಂಟೇನರ್ಗಳಲ್ಲಿಯೂ ಬೆಳೆಸಬಹುದು.
ಕೇಪುಳ ಗಿಡ ಸುಮಾರು ೪ರಿಂದ ೬ ಅಡಿ ಎತ್ತರ ಬೆಳೆ ಯುತ್ತದೆ. ಕೆಲವೊಮ್ಮೆ ಹವಾಮಾನಕ್ಕನುಗುಣವಾಗಿ ೧೨ ಅಡಿ ಎತ್ತರಕ್ಕೂ ಬೆಳೆಯಬಲ್ಲದು. ಗಿಡ ಕವಲು ಕವಲಾಗಿ ಬೆಳೆದು ನೋಡಲು ಪೊದೆಯ ತರಹ ಕಾಣುತ್ತದೆ. ಕಾಂಡದ ಪ್ರತಿ ಜಾಯಿಂಟ್ನಲ್ಲಿ ಎದುರು ಬದುರಾಗಿರುವ ಎರಡು ಎಲೆಗಳನ್ನು ಕಾಣಬಹುದು. ಎಲೆಗಳು ಕಡು ಹಸಿರು ಬಣ್ಣದಲ್ಲಿದ್ದು ಹೊಳಪನ್ನು ಹೊಂದಿವೆ. ವಿಶೇಷ ಅಂದರೆ ಎಲೆಗಳು ತೊಟ್ಟುಗಳನ್ನು ಹೊಂದದೆ, ಕಾಂಡಕ್ಕೆ ಅಂಟಿಕೊಂಡಿರುತ್ತವೆ. ಎಲೆಗಳಿಂದ ಕೂಡಿದ ಕಾಂಡದ ಕೊನೆಯಲ್ಲಿ ಗುಂಪುಗುಂಪಾಗಿ ಹೂವುಗಳು ಅರಳುತ್ತವೆ. ಪ್ರತಿಯೊಂದೂ ಹೂವಿನಲ್ಲಿ ಸಾಮಾನ್ಯವಾಗಿ ನಾಲ್ಕು ದಳಗಳಿರುತ್ತವೆ. ಆದರೆ ಕೆಲವೊಂದು ಪ್ರಭೇದಗಳಲ್ಲಿ ದಳಗಳ ಸಂಖ್ಯೆ ಹೆಚ್ಚಿರಬಹದು. ಹೂವುಗಳ ದಳಗಳು ಚೂಪಾಗಿದ್ದು ಮೂರರಿಂದ ಎಂಟು ಸೆಂಟೀಮೀಟರ್ ಉದ್ದ ಮತ್ತು ಎರಡೂವರೆಯಿದ ಮೂರೂವರೆ ಸೆಂಟಿಮೀಟರ್ ಅಗಲವಿರುತ್ತದೆ. ಈ ಹೂವುಗಳು ಕೆಂಪು, ಹಳದಿ, ಗುಲಾಬಿ, ಬಿಳಿ ಹಾಗೂ ಕಿತ್ತಳೆ ಬಣ್ಣಗಳಲ್ಲಿ ಕಂಡು ಬರುತ್ತವೆ.

ಕಾಯಿಗಳು ಸುಮಾರು ಅರ್ಧಸೆಂಟಿಮೀಟರ್ ಗೋಲಾಕಾರದಲ್ಲಿ ಇದ್ದು ಗೊಂಚಲುಗಳಾಗಿಯೇ ಬೆಳೆಯುತ್ತವೆ. ನಿಧಾನವಾಗಿ ಪಕ್ವವಾಗು ತ್ತಿದ್ದಂತೆ ಹಸಿರು ಕಾಯಿಗಳು ಕೆಂಪು ಅಥವಾ ನೇರಳೆ-ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹಣ್ಣುಗಳು ಸಿಹಿ ಹಾಗೂ ಚೊಗರು ರುಚಿಯನ್ನು ಹೊಂದಿ ರುತ್ತವೆ. ಪ್ರತಿ ಹಣ್ಣಿನಲ್ಲಿ ಎರಡು ಬೀಜಗಳಿವೆ. ಇನ್ನು ಹಳ್ಳಿಗಳಲ್ಲಿ ಮಕ್ಕಳು ಈ ಹಣ್ಣುಗಳ ರುಚಿಯನ್ನು ಸವಿಯದೇ ಇರಲಾರರು.
ಹೂವುಗಳು, ಎಲೆಗಳು, ಬೇರುಗಳು ಮತ್ತು ಕಾಂಡವನ್ನು ಭಾರ ತೀಯ ಸಾಂಪ್ರದಾಯಿಕ ಔಷಧ ಪದ್ಧತಿ, ಆಯುರ್ವೇದ ಔಷಧಿಗಳಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಮಕ್ಕಳ ಮೂತ್ರದಲ್ಲಿ ಧಾತು ಹೋಗುವದನ್ನು ತಡೆಯಲು ಬಿಳಿ ಕೇಪುಳ ಹೂವಿನ ಗಿಡದ ಬೇರನ್ನು ನೀರಿನಲ್ಲಿ ತೇದು ನಲವತ್ತೈದು ದಿನ ಮಕ್ಕಳಿಗೆ ಕುಡಿಸುತ್ತಾರೆ. ಇದಲ್ಲದೆ ಉರಗೆ ಗಡ್ಡೆ ಮತ್ತು ಕೇಪುಳ ಗಿಡದ ಬೇರುಗಳ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಕಷಾಯ ಮಾಡಿ ಮಕ್ಕಳಿಗೆ ಕುಡಿಸುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಮಕ್ಕಳಿಗೆ ಕಜ್ಜಿ, ಮೈ ತುರಿಕೆಯಿದ್ದಾಗ ಹೂವಿನ ಕೇಸರವನ್ನು ತೆಗೆದು ಹಾಕಿ ಹೂವನ್ನು ತೊಳೆದು ತೊಳದ ಮೊಗ್ಗು, ಕಾಯಿ ಹೂವುಗಳನ್ನು ಕೂಡಿಸಿ ಜಜ್ಜಿ, ರಸವನ್ನು ಹಿಂಡಿ ಅರ್ಧದಿಂದ ಒಂದು ಚಮಚ ಕುಡಿಸಿದರೆ ಕಜ್ಜಿ, ತುರಿಕೆಗಳು ಕಡಿಮೆಯಾಗುತ್ತವೆ. ಅಲ್ಲದೆ ಕೂದಲೆಣ್ಣೆ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. ಇಷ್ಟೇ ಅಲ್ಲದೆ ನೋವು, ಮೂಲವ್ಯಾಧಿ, ಕರುಗಳಲ್ಲಿನ ಸೆಳೆತ, ಗರ್ಭಾಶಯದ ತೊಂದರೆಗಳ್ನು ನಿವಾರಿಸುವಲ್ಲಿ ಈ ಕೇಪುಳ ಸಹಾಯ ಮಾಡುತ್ತದೆ.
ಹಳ್ಳಿಗಳಲ್ಲಿ ಕೇಪುಳ ಗಿಡದ ಮೊಗ್ಗು ಹಾಗೂ ಚಿಗುರುಗಳಿಂದ ಮಾಡಿದ ಚಟ್ನಿ, ತಂಬುಳಿ ಇದ್ದರೆ ಊಟದ ರುಚಿಯೇ ಬೇರೆ. ಮೊದಲೇ ಹೇಳಿದ ಹಾಗೆ ಈಶ್ವರನಿಗೆ ಪ್ರಿಯವಾದ ಹೂವಾದ್ದರಿಂದ ಇದಕ್ಕೆ ಇಕ್ಸೋರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಇಷ್ಟೆಲ್ಲಾ ಪವಿತ್ರವಾದ, ಔಷಧಯುಕ್ತವಾದ ಅಮೂಲ್ಯ ಸಸ್ಯವನ್ನು ಬೆಳೆದು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ?