Category: ಸಸ್ಯ

  • ಬಾಳೆ ಹೂವಿ(banana flower)ನಿಂದ ಜೀರ್ಣಕ್ರಿಯೆ ಸರಾಗ!

    ಬಾಳೆ ಹೂವಿ(banana flower)ನಿಂದ ಜೀರ್ಣಕ್ರಿಯೆ ಸರಾಗ!

    ಈ ಲೇಖನದಲ್ಲಿ ನಮಗೆಲ್ಲಾ ಪರಿಚಿತವಾಗಿರುವ ಬಾಳೆ ಹೂವಿ( banana flower )ನ ಬಗ್ಗೆ ತಿಳಿಯೋಣ. ಬಾಳೆ ಹೂವುಗಳು ನಮಗೆ ಗೋಚರಿಸುವುದಕ್ಕೂ ಬಹಳ ಹಿಂದೆಯೇ ಬಾಳೆ ಗಿಡದ ಕಾಂಡದೊಳಗೆ ರೂಪುಗೊಳ್ಳುತ್ತವೆ. ನಂತರ ನಿಧಾನವಾಗಿ ಅಂದರೆ ಒಂದೆರಡು ವಾರದೊಳಗೆ ಹೊರ ಬರತೊಡಗುತ್ತವೆ. ಬಾಳೆ ಹೂವು (banana flower) ಗಳು ದೊಡ್ಡದೊಡ್ಡ ಗುಲಾಬಿ ಬಣ್ಣದ ತೊಗಟೆಯ ಒಳಗೆ ಕಂಡು ಬರುತ್ತವೆ. ಇದನ್ನು ಬಾಳೆ ಕುಂಡಿಗೆ ಎಂದು ಕೆಲವು ಕಡೆಗಳಲ್ಲಿ ಕರೆಯುವುದಂಟು. ಕೆಂಪು ಅಥವಾ ಗುಲಾಬಿ ಬಣ್ಣದ ತೊಗಟೆ ಒಳಗೆ ಹೂವುಗಳು ಕೈಗಳು ಎಂದು ಕರೆಯಲ್ಪಡುವ ಗುಂಪುಗಳಲ್ಲಿ ಕಂಡುಬರುತ್ತವೆ. ಹೂವಿನ ತುದಿ ಸಾಮಾನ್ಯವಾಗಿ ಹಳದಿ ಬಣ್ಣ ಹೊಂದಿರುತ್ತದೆ. ಪ್ರತೀ ಹೂಗೊಂಚಲುಗಳೂ ಮುಂದೆ ಬಾಳೆ ಹಣ್ಣುಗಳಾಗಿ ಬೆಳೆಯುತ್ತವೆ. ಬಾಳೆಹೂವಿನಲ್ಲಿಯೂ ಉತ್ತಮ ಪೋಷಕಾಂಶಗಳಿವೆ. ಒಂದರ್ಥದಲ್ಲಿ ಹಣ್ಣು, ಎಲೆ ಮತ್ತು ದಿಂಡುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ಈ ಹೂವಿನಲ್ಲಿವೆ.

    ಪೋಷಕಾಂಶಗಳ ಆಗರ ಈ ಬಾಳೆ!

    ಬಾಳೆ ಗಿಡದ ಬಹುತೇಕ ಭಾಗಗಳು ಉಪಯೋಗಕ್ಕೆ ಸಿಗುವಂತಹವೇ. ಬಾಳೆ ಹೂವು, ದಿಂಡು, ಕಾಯಿ ಹಾಗೂ ಹಣ್ಣುಗಳ ನಮ್ಮ ದಿನನಿತ್ಯದ ಆಹಾರದ ಒಂದು ಭಾಗವಂದರೆ ತಪ್ಪಾಗಲಾರದು. ನಮ್ಮ ದೇಹಕ್ಕೆ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇವುಗಳಲ್ಲಿ ಅಡಕವಾಗಿವೆ. ಕರ್ನಾಕದಲ್ಲಷ್ಟೇ ಅಲ್ಲದೆ ಭಾರತದ ಹೆಚ್ಚಿನ ಭಾಗಗಳಲ್ಲಿ ಬಾಳೆ ಎಲೆಯನ್ನು ಊಟಕ್ಕೆ ಬಳಸುತ್ತಾರೆ. ಅಲ್ಲದೆ ಬಾಳೆ ಎಲೆಗಳು ಅನೇಕ ಪ್ರಾಣಿಗಳಿಗೆ ಆಹಾರವೂ ಹೌದು. ಬಾಳೆ ಕಾಯಿಯಿಂದ ಪಲ್ಯ, ಸಾಂಬಾರು, ಚಿಪ್ಸ್ ಹೀಗೆ ಅನೇಕ ಬಗೆಯ ಖಾದ್ಯಗಳ ತಯಾರಿಸುತ್ತಾರೆ..

    ಬಾಳೆ ಹೂವಿನಿಂದ ಜೀರ್ಣಕ್ರಿಯೆ ಸರಾಗ!

    ಇನ್ನು ಬಾಳೆ ಹೂವನ್ನು ಅಡುಗೆಯಲ್ಲೂ ಸಹ ಬಳಸುತ್ತಾರೆ. ಬಾಳೆ ಕುಂಡಿಗೆ ಪಲ್ಯ, ಬಾಳೆ ಕುಂಡಿಗೆ ವಡಾ, ಬಾಳೆ ಕುಂಡಿಗೆ ಚಟ್ನಿ, ಬಾಳೆ ಹೂವಿನ ತೊಕ್ಕು, ಬಾಳೆ ಹೂವಿನ ಸಾರು, ಹೂವಿನ ಚಟ್ನಿ, ಬಾಳೆ ಹೂವಿನ ಚಿಪ್ಸ್ ಹೀಗೆ ನಮ್ಮ ದಿನನಿತ್ಯದ ಆಹಾರದಲ್ಲಿ ಬಾಳೆಹೂವು ಪ್ರಮುಖವಾಗಿರುತ್ತದೆ. ಬಾಳೆ ಹೂವು ಅಡುಗೆಯಲ್ಲಷ್ಟೇ ಬಳಕೆಯಾಗದೆ ಅನೇಕ ಬಗೆಯ ಔಷಧೀಯ ಗುಣಗಳನ್ನು ಹೊಂದಿದೆ. ಬಾಳೆಹೂವಿನಲ್ಲಿ ಕರಗದ ನಾರು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಸುಲಭ ಜೀರ್ಣಕ್ರಿಯೆ ಮತ್ತು ವಿಸರ್ಜನೆಗೆ ಸಹಕಾರಿ.

    Banana Flower

    ಬಾಳೆಹೂವಿನಲ್ಲಿ ಪಾಲಿಫೆನಾಲ್ ಎಂಬ ಕಣಗಳಿದ್ದು ಇವುಗಳು ಉತ್ತಮ ಆಂಟಿ ಆಕ್ಸಿಡೆಂಟುಗಳಂತೆ ಕಾರ್ಯನಿರ್ವಹಿಸುತ್ತವೆ. ಅವು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಕಣಗಳ ವಿರುದ್ದ ಹೋರಾಡಿ ವಿವಿಧ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ. ಹಾಗೂ ಒತ್ತಡದಿಂದಾಗುವ ತೊಂದರೆಗಳಿಂದಲೂ ರಕ್ಷಿಸುತ್ತದೆ.
    ಮಧುಮೇಹ, ಜಂತುಗಳಿಂದ ಉಂಟಾದ ಆಮಶಂಕೆ, ಅತಿಸಾರದ ತೊಂದರೆಗಳು ಬಾಳೆಹೂವಿನ ಸೇವನೆಯಿಂದ ಕಡಿಮೆಯಾಗುತ್ತವೆ. ಅಲ್ಲದೆ ಮಹಿಳೆಯರ ಮಾಸಿಕ ದಿನಗಳಲ್ಲಿ ಆಗುವ ಹೆಚ್ಚಿನ ರಕ್ತಸ್ರಾ ವವನ್ನು ತಡೆಯುತ್ತದೆ. ಇಷ್ಟೇ ಅಲ್ಲದೆ ಬಾಳೆ ಹೂವುಗಳು ಹಲವು ಸೋಂಕುಗಳಿಂದ ನಮ್ಮನ್ನು ರಕ್ಷಿಸುವುದಲ್ಲದೆ, ಮೂತ್ರಪಿಂಡಗಳ ಕಾರ್ಯ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.

    Banana Flower

    ಇದು ಮರವಲ್ಲವೇ ಅಲ್ಲ!

    ಬಾಳೆಹಣ್ಣು ಸೇರಿದ ಕುಟುಂಬವನ್ನು ಮ್ಯೂಸೇಸಿ ಎಂದು ಕರೆಯಲಾಗುತ್ತದೆ. ಬಾಳೆ ಗಿಡವು ಒಂದು ಗಿಡಮೂಲಿಕೆಯಾಗಿದ್ದು, ಇದನ್ನು ಸಾಮಾನ್ಯವಾಗಿ ಮರ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ, ಅದರ ಗಾತ್ರ ಮತ್ತು ರಚನೆಯಿಂದಾಗಿ ಮರದಂತೆ ಕಾಣಿಸುತ್ತದೆ. ಬಾಳೆ ಗಿಡಗಳನ್ನು ಪ್ರಪಂಚದಾದ್ಯಂತದ ೧೩೫ ದೇಶಗಳಲ್ಲಿ ಬೆಳೆಯಲಾಗುತ್ತದೆ. ಬಾಳೆ ಮರಗಳು ಸಾಮಾನ್ಯವಾಗಿ ಉಷ್ಟವಲಯಗಳಲ್ಲಿ ಕಂಡು ಬರುತ್ತವೆ. ಬಾಳೆ ಗಿಡ ಬೆಳೆಯಲು ತೆವಾಂಶವಿರುವ ಮಣ್ಣು ಹಾಗು ನೀರು ಬೇಕು. ನೀರಿನ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾದರೆ ಗಿಡ ಬೇರು ಕೊಳೆತು ಹೋಗುತ್ತವೆ. ಅದರಿಂದ ಹದವಾದ ಮಣ್ಣು ಹಾಗು ನೀರು ಬಾಳೆ ಗಿಡಗಳ ಬೆಳವಣಿಗೆಯನ್ನು ನಿರ್ಧರಿಸುವುವು.
    ಬಾಳೆಹಣ್ಣುಗಳನ್ನು ವೈನ್ ಮತ್ತು ಬಿಯರ್ ತಯಾರಿಯಲ್ಲೂ ಉಪಯೋಗಿಸಲಾಗುತ್ತದೆ.

  • ಅಗ್ನಿಶಿಖೆ : ಅಮೃತ ಮತ್ತು ವಿಷದ ಸಂಗಮ!

    ಅಗ್ನಿಶಿಖೆ : ಅಮೃತ ಮತ್ತು ವಿಷದ ಸಂಗಮ!

    ಈ ವೀಡಿಯೋ ಕೇವಲ ಈ ಹೂವನ್ನು ಪರಿಚಯುಸುವ ಪ್ರಯತ್ನವಷ್ಟೇ. ಮೊದಲೇ ಏಕೆ ಈ ವಿಷಯ ಹೇಳಿದೆವೆಂದರೆ ಇದು ಔಷಧಯುಕ್ತ ವಿಷಕಾರಿ ಹೂವು. ಹೌದು… ಈ ಹೂವು ವಿಷಕಾರಿಯಾದರೂ ಭರಪೂರ ಔಷಧೀಯ ಗುಣಗಳನ್ನು ಒಳಗೊಂಡಿದೆ. ಆಯುರ್ವೇದ ತಜ್ಞರ ಮಾರ್ಗದರ್ಶನವಿಲ್ಲದೆ ಈ ಗಿಡದಿಂದ ತಯಾರಿಸಿದ ಔಷಧಗಳನ್ನು ಸೇವಿಸಿದರೆ ಸಾವು ಖಚಿತ. ಇಂತಹ ವಿಷಕಾರಿ ಹೂವು ಯಾವುದೆಂದಿರಾ? ಅದೇ ಅಗ್ನಿಶಿಖೆ.
    ತನ್ನ ಸೌಂದರ್ಯದಿಂದಲೇ ಎಲ್ಲರ ಕಣ್ಸೆಳೆಯುವ ಈ ಅಗ್ನಿಶಿಖೆಯ ಮೂಲ ದಕ್ಷಿಣ ಆಫ್ರಿಕಾ. ಆದರೂ ಭಾರತ, ಮಲೆಷಿಯಾ, ಇಂಡೋನೇಷಿಯಾ ರಾಷ್ಟ್ರಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಇದು ಜಿಂಬಾಬ್ವೆಯ ರಾಷ್ಟ್ರೀಯ ಹೂವೂ ಹೌದು. ದೂರದ ಜಿಂಬಾಬ್ವೆ ಬಿಡಿ, ನಮ್ಮ ನೆರೆಯ ತಮಿಳುನಾಡಿನವರೂ ಸಹ ಈ ಹೂವನ್ನು ’ರಾಜ್ಯದ ಹೂವು’ ಎಂದು ಒಪ್ಪಿಕೊಂಡಿದ್ದಾರೆ.

    ಅಗ್ನಿಶಿಖೆ

    ಅಗ್ನಿಶಿಖೆಯ ವೈಜ್ಞಾನಿಕ ಹೆಸರು ಗ್ಲೋರಿಯೊಸಾ ಸುಪರ್ಬಾ

    ಈ ಹೂವಿನ ವೈಜ್ಞಾನಿಕ ಹೆಸರು ಗ್ಲೋರಿಯೊಸಾ ಸುಪರ್ಬಾ. ಕೊಲ್ಚಿಕೇಶಿಯ ಕುಟುಂಬಕ್ಕೆ ಸೇರಿದ ಇದನ್ನು ಇಂಗ್ಲೀಷಿನಲ್ಲಿ ಫ್ಲೇಮ್ ಲಿಲಿ, ಕ್ಲೈಂಬಿಂಗ್ ಲಿಲ್ಲಿ, ಕ್ರೀಪಿಂಗ್ ಲಿಲಿ, ಗ್ಲೋರಿ ಲಿಲಿ, ಗ್ಲೋರಿಯೊಸಾ ಲಿಲಿ, ಟೈಗರ್ ಕ್ಲಾವ್, ಮತ್ತು ಫೈರ್ ಲಿಲಿ ಎಂದೂ, ಸಂಸ್ಕೃತದಲ್ಲಿ ಅಗ್ನಿಮುಖಿ-ಅಗ್ನಿಶಿಖಾ ಎಂದು ಕರೆದರೆ ಕನ್ನಡದಲ್ಲಿ ಅಗ್ನಿಶಿಖೆ, ಶಿವರಕ್ತ ಬಳ್ಳಿ, ಗೌರಿ ಹೂವು, ಕರಡಿ ಕಣ್ಣಿನ ಹೂವು ಎಂದು ಕರೆಯುತ್ತಾರೆ.

    ಉರಿಯುವ ಜ್ವಾಲೆ!!!

    ಗ್ಲೋರಿಯೊಸಾ ಸುಪರ್ಬಾ ನಿತ್ಯ ಹರಿದ್ವರ್ಣ ಕಾಡುಗಳು, ಹುಲ್ಲುಗಾವಲು, ಪಾಳು ಭೂಮಿಯ ಪೊದೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಅಲ್ಲದೆ ಮನೆಯಗಳ, ಹೂದೋಟಗಳಲ್ಲಿಯೂ ಅಲಂಕಾರಕ್ಕಾಗಿ ಬೆಳೆಯಬಹುದು. ಈ ಸಸ್ಯ ಸುಮಾರು ಹದಿನೈದರಿಂದ ಇಪ್ಪತ್ತು ಅಡಿಗಳಷ್ಟು ಎತ್ತರ ಬೆಳೆಯಬಲ್ಲವು. ಮೃದುವಾದ ಹಸಿರು ಕಾಂಡಗಳಿಂದ ಕೂಡಿದ್ದು, ತೊಟ್ಟುಗಳಿಲ್ಲದ ಎಲೆಗಳು ಕಾಂಡಕ್ಕೆ ಹೊಂದಿಕೊಂಡಿರುತ್ತವೆ. ಹತ್ತರಿಂದ ಹನ್ನೆರಡು ಸೆಂ.ಮೀ. ಉದ್ದ ಹಾಗೂ ಮೂರರಿಂದ ಐದು ಸೆ.ಮೀ. ಅಗಲದ ಶಂಖಾಕಾರದ ಎಲೆಗಳ ತುದಿ ಚೂಪಾಗಿದ್ದು ಸುರುಳಿಯಂತೆ ಸುತ್ತಿಕೊಂಡಿರುತ್ತದೆ. ಹೂವುಗಳು ನೀಳವಾದ ಹಸಿರು ತೊಟ್ಟುಗಳಲ್ಲಿ ಹಸಿರು, ಹಳದಿ, ಕೆಂಪು ಹಾಗೂ ಕಡು ನೀಲಿ ಬಣ್ಣದ ಹೂವುಗಳು ಅರಳುತ್ತವೆ. ನಂತರ ಕೆಂಪು ಮತ್ತು ಹಳದಿ ಬಣ್ಣಕ್ಕೆ ತಿರುಗಿ ಉರಿಯುವ ಜ್ವಾಲೆಯಂತೆ ಕಾಣತೊಡಗುತ್ತವೆ. ಅದರಿಂದಾಗಿಯೇ ಈ ಹೂವಿಗೆ ಅಗ್ನಿಶಿಖಾ ಎಂಬ ಹೆಸರು ಬಂದಿದೆ.

    ಅತ್ಯಂತ ವಿಷಯುಕ್ತ ಸಸ್ಯ?

    ಈ ಸಸ್ಯವು ಅತ್ಯಂತ ವಿಷಯುಕ್ತ ಸಸ್ಯ. ಇದರಲ್ಲಿರುವ ವಿಷದ ಕಾರಣದಿಂದಲೇ ಔಷಧ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ.ಇದರ ಹೂವು, ಬೇರು, ಎಲೆ, ಚಿಗುರು, ಬೀಜ ಎಲ್ಲವೂ ಔಷದ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ. ಬಂಜೆತನ, ಗಾಯಗಳು, ಹುಣ್ಣು, ಸಂಧಿವಾತ, ಮೂತ್ರಪಿಂಡದ ತೊಂದರೆಗಳು, ತುರಿಕೆ, ಕುಷ್ಠರೋಗ, ಮೂಲವ್ಯಾಧಿ, ಕ್ಯಾನ್ಸರ್ ಮುಂತಾದ ರೋಗಗಳು ಅಗ್ನಿಶಿಖೆಯಿಂದ ಗುಣಮುವಾಗುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲದೆ ಕೆಲವು ಲೈಂಗಿಕ ರೋಗಗಳ ಚಿಕಿತ್ಸೆಯಲ್ಲಿಯೂ ಸಹ ಬಳಸಲಾಗುತ್ತದೆ. ಇದಲ್ಲದೆ ನೈಜೀರಿಯಾದ ಗುಡ್ಡಗಾಡು ಜನರು ಬಾಣಗಳಿಗೆ ಗ್ಲೋರಿಯೊಸಾ ಸುಪರ್ಬಾದಿಂದ ತಯಾರಿಸಿದ ವಿಷವನ್ನು ಹಚ್ಚುತ್ತಾರೆ.
    ಸರ್ವ ರೋಗಗಳಿಗೂ ರಾಮಬಾಣವಾದ ಈ ಅಗ್ನಿಶಿಖೆಗೆ ಅನೇಕ ದೇಶಗಳಲ್ಲಿ ಬೇಡಿಕೆಯಿದೆ. ಈ ಕಾರಣಕ್ಕಾಗಿ ತಮಿಳುನಾಡಿನ ತಿರುಚಿ, ಕರೂರು, ಅರಿಯಲೂರು, ದಿಂಡಿಗಲ್, ನಾಮಕ್ಕಲ್, ಈರೋಡ್ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ಈ ಸಸ್ಯವನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ.

    ಅಗ್ನಿಶಿಖೆ ಹೂವಿಲ್ಲದೆ ಮುರುಗನ ಪೂಜೆ ನಡೆಯುವುದೇ ಇಲ್ಲ

    ಹಾಗಾದರೆ ವಿಷಯುಕ್ತ ಈ ಅಗ್ನಿಶಿಖೆಯ ಹೂವು ದೇವರಿಗೆ ಅರ್ಪಿಸುವುದಿಲ್ಲ ಎಂದು ಭಾವಿಸಿದರೆ ಅದು ತಪ್ಪು. ತಮಿಳು ನಾಡಿನಲ್ಲಿ ಈ ಹೂವಿಲ್ಲದೆ ಮುರುಗನ ಪೂಜೆ ನಡೆಯುವುದೇ ಇಲ್ಲ ಅಂದರೂ ತಪ್ಪಾಗಲಾರದು. ಹಾ… ಕೊನೆಯಲ್ಲೊಂದು ನೆನಪಿಟ್ಟುಕೊಳ್ಳಬೇಕಾದ ವಿಷಯ. ಯಾವುದೇ ಕಾರಣಕ್ಕೂ ಅಗ್ನಿಶಿಖೆ ಹೂವನ್ನು ಔಷಧ ರೀತಿಯಲ್ಲಿ ಉಪಯೋಗಿಸುವ ಅಥವಾ ಇದರಿಂದ ತಯಾರಾದ ಔಷಧಗಳನ್ನು ತಜ್ಞರ ಸಲಹೆಯಿಲ್ಲದೆ ಉಪಯೋಗಿಸಲೇಬಾರದು. ಅಲ್ಲದೆ ಚಿಕ್ಕ ಮಕ್ಕಳ ಕೈಗೆ ಹೂವು ಸಿಗದ ಹಾಗೆ ನೋಡಿಕೊಳ್ಳುವುದು ಉತ್ತಮ.

    ನಮಗೆ ತಿಳಿಯದ ಬೌಗೆನ್ವಿಲ್ಲಾ ಹೂವಿನ ರಹಸ್ಯ!

  • ನಮಗೆ ತಿಳಿಯದ ಬೌಗೆನ್ವಿಲ್ಲಾ ಹೂವಿನ ರಹಸ್ಯ!

    ನಮಗೆ ತಿಳಿಯದ ಬೌಗೆನ್ವಿಲ್ಲಾ ಹೂವಿನ ರಹಸ್ಯ!

    ಹಲ್ಲೋ ಗೆಳೆಯರೇ, ಇವತ್ತು ಮೊದಲಿಗೆ ಒಂದು ಟೀ ಕುಡಿಯೋಣವೇ? ಟೀ ಅಂದ್ರೆ ಮಾಮೂಲಿ ಅಲ್ಲಾ, ಆರೋಗ್ಯಕರವಾದ ಟೀ. ಬೌಗೆನ್ವಿಲ್ಲಾ ಟೀ.

    ಬೌಗೆನ್ವಿಲ್ಲಾ

    ಮೊದಲಿಗೆ ಎರಡು ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ಹತ್ತರಿಂದ ಹದಿನೈದು ಕೆಂಪು ಬೌಗೆನ್ವಿಲ್ಲಾ ಹೂವುಗಳನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಹಾಕಿ. ಜೊತೆಗೆ ಒಂದು ಚೂರು ದಾಲ್ಚಿನ್ನಿ ಚಕ್ಕೆಯನ್ನು ಸಹಾ ಕುದಿಯುವ ನೀರಿಗೆ ಹಾಕಿ. ಸುಮಾರು ಐದು ನಿಮಿಷಗಳ ನಂತರ ಪಾತ್ರೆಯನ್ನು ಇಳಿಸಿ ಚಹಾವನ್ನು ಸೋಸಿ ಒಂದು ಕಪ್‌ಗೆ ಹಾಕಿ. ಅದಕ್ಕೆ ರುಚಿಗೆ ತಕ್ಕಷ್ಟು ಅಂದರೆ ಸುಮಾರು ಎರಡು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ. ಈಗ ಕೆಂಪು ಬಣ್ಣದ ಬೌಗೆನ್ವಿಲ್ಲಾ ಚಹ ಸವಿಯಲು ರೆಡಿ.

    ಇಷ್ಟಕ್ಕೂ ಚಹಾದ ವಿಷಯ ಈ ಕಾಲಂನಲ್ಲೇಕೆ ಬಂತು ಅಂತೀರಾ? ಇದು ಅಂತಿಂಥ ಚಹಾ ಅಲ್ಲ, ಈ ಚಹದಲ್ಲಿ ಅನೇಕ ಔಷಧಿಯುಕ್ತ ಗುಣಗಳಿವೆ. ಇದರ ಔಷಧೀಯ ಗುಣಗಳ ಬಗ್ಗೆ ಕೊನೆಯಲ್ಲಿ ಚರ್ಚಿಸೋಣ. ಮೊದಲಿಗೆ ಬೌಗೆನ್ವಿಲ್ಲಾ ಗಿಡ, ಹೂವುಗಳ ಬಗ್ಗೆ ತಿಳಿಯೋಣ.

    ಬೌಗೆನ್ವಿಲ್ಲಾ

    ಬೌಗೆನ್ವಿಲ್ಲಾ ಮೂಲ ದಕ್ಷಿಣ ಅಮೇರಿಕಾ!

    ಬೌಗೆನ್ವಿಲ್ಲಾ ಹೂವು ದಕ್ಷಿಣ ಅಮೇರಿಕಾ ಮೂಲದ್ದು. ಇದು ದಕ್ಷಿಣ ಅಮೆರಿಕಾ, ಏಷ್ಯಾ, ಆಫ್ರಿಕಾ ಮತ್ತು ಉಷ್ಣವಲಯದ ಮತ್ತು ಬೆಚ್ಚನೆಯ ಹವಾಮಾನದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಹೂವಿನ ದಳಗಳು ತೆಳ್ಳನೆಯ ಪೇಪರಿನ ಹಾಗೆ ಇರುವುದರಿಂದ ಇದನ್ನು ಕಾಗದದ ಹೂವು ಅಥವಾ ಪೇಪರ್ ಫ್ಲವರ್ ಎಂದೂ ಕರೆಯುತ್ತಾರೆ.

    ಬಂಗಾಳಿಯಲ್ಲಿ ಬಗಾನ್ ಬಿಲಾಶ್, ಚೀನಾದಲ್ಲಿ ಮಾವೋ ಬಾವೊ ಜಿನ್, ಜಿಯು ಚೊಂಗ್ ಜಿ, ಸ್ಯಾನ್ ಜಿಯಾವೊ ಹುವಾ, ಹಿಂದಿಯಲ್ಲಿ ಬೂಗನ್ಬೆಲ್, ಇಂಡೋನೆಷಿಯಾದಲ್ಲಿ ಬುಗಾನ್ವಿಲ್, ಬುಂಗಾ ಕೆಟಾರ್ಸ್, ಜಪಾನ್‌ನಲ್ಲಿ ಪೆಲಿಲಾ, ಥೈಲ್ಯಾಂಡ್‌ನಲ್ಲಿ ಫುವಾಂಗ್ ಫಾಹ್ ಮತ್ತು ಹೋವಾ ಗಿಯೆ, ವಿಯೆಟ್ನಾಮ್‌ನಲ್ಲಿ ಬಾಂಗ್ ಗಿಯೆ ಎಂದೂ, ಕೊಂಕಣಿಯಲ್ಲಿ ಬೌಗೆನ್ವಿಲ್ಲಾ, ಮಣಿಪುರಿ ಭಾಷೆಯಲ್ಲಿ ಚೆರೆ ಮತ್ತು ತೆಲುಗಿನಲ್ಲಿ ಕಗಿತಾಲ ಪುವ್ವು ಎಂದು ಕರೆಸಿಕೊಳ್ಳುವ ಬೌಗೆನ್ವಿಲ್ಲ ಸುಮಾರು ಹದಿನೆಂಟು ವಿವಿಧ ತಳಿಗಳಲ್ಲಿ ಕಂಡು ಬರುತ್ತವೆ. ಇದನ್ನು ನಮ್ಮ ಭಾರತದಲ್ಲಿ ಅಲಂಕಾರಿಕ ಹೂವಾಗಿ ಬೆಳೆಸುತ್ತಾರೆ.

    ಬೌಗೆನ್ವಿಲ್ಲಾ ಬಣ್ಣವು ನೇರಳೆ ಅಥವಾ ಕೆನ್ನೇರಳೆ ಬಣ್ಣವಾಗಿದೆ,

    ಅತ್ಯಂತ ಸಾಮಾನ್ಯವಾದ ಬೌಗೆನ್ವಿಲ್ಲಾ ಬಣ್ಣವು ನೇರಳೆ ಅಥವಾ ಕೆನ್ನೇರಳೆ ಬಣ್ಣವಾಗಿದೆ, ಉಳಿದವುಗಳು ಗುಲಾಬಿ, ಕೆಂಪು, ಕಿತ್ತಳೆ, ಬಿಳಿ ಅಥವಾ ಹಳದಿ ಬಣ್ಣಗಳಲ್ಲಿ ಕಂಡು ಬರುತ್ತವೆ. ಒಮ್ಮೊಮ್ಮೆ ಇದು ಎರಡು ಬಣ್ಣಗಳಲ್ಲಿಯೂ ಅರಳುತ್ತವೆ. ಬೌಗೆನ್ವಿಲ್ಲಾ ಗಿಡ, ಬಳ್ಳಿ ಅಥವಾ ಮರಗಳಾಗಿಯೂ ಬೆಳೆಯುತ್ತವೆ. ಬಳ್ಳಿ ಪ್ರಭೇದಗಳು ಇತರ ಸಸ್ಯಗಳನ್ನು ತಮ್ಮ ಮೊನಚಾದ ಮುಳ್ಳುಗಳಿಂದ ಹಿಡಿದು, ಸುಮಾರು ಒಂದರಿಂದ ಹನ್ನೆರಡು ಮೀಟರ್ ಉದ್ದ ಬೆಳೆಯುತ್ತವೆ. ಎಲೆಗಳು ಸುಮಾರು ನಾಲ್ಕರಿಂದ ಹದಿಮೂರು ಸೆಂ.ಮೀ ಉದ್ದ ಮತ್ತು ೨ರಿಂದ ೬ ಸೆಂ.ಮೀ ಅಗಲವಿರುತ್ತವೆ.

    ಬೌಗೆನ್ವಿಲ್ಲಾ

    ನಾವೆಲ್ಲಾ ನೋಡಿದಂತೆ ಹೂವು ಬೇರೆ ಬೇರೆ ಬಣ್ಣಗಳಲ್ಲಿ ಕಂಡು ಬಂದು, ಮೂರು ದಳಗಳನ್ನು ಹೊಂದಿರತ್ತವೆ. ಒಮ್ಮೆ ಹೂವು ಬಿಟ್ಟರೆ ಎಂಟರಿಂದ ಹತ್ತು ದಿನಗಳ ವರಗೆ ಬಾಡದೇ ತಮ್ಮ ತಾಜಾತನವನ್ನು ಉಳಿಸಿಕೊಳ್ಳಬಲ್ಲವು. ಆದರೆ ಇವು ಪೇಪರ್ ಫ್ಲವರ್ ಹೂವುಗಳಲ್ಲ. ಗಮನಿಸಿ ನೋಡಿದರೆ, ಮೂರು ದಳಗಳ ಮಧ್ಯದಲ್ಲಿ ಚಿಕ್ಕ ಬಿಳಿಯ ಬಣ್ಣದಲ್ಲಿ ನಿಜವಾದ ಹೂವು ಇರುತ್ತವೆ.

    ಇನ್ನು ಬೌಗೆನ್ವಿಲ್ಲಾ ಗಿಡವು ಶುಷ್ಕ ಮಣ್ಣಿನಲ್ಲಿ, ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಸೊಗಸಾಗಿ ಬೆಳೆಯುತ್ತವೆ. ಒಮ್ಮೆ ಬೆಳೆದ ಗಿಡಗಳಿಗೆ ಹೆಚ್ಚಿನ ನೀರಿನ ಅವಶ್ಯತೆಯಿರುವುದಿಲ್ಲ. ಹೆಚ್ಚು ನೀರಿರುವ ಜಾಗದಲ್ಲಿ ಅವು ಬೆಳೆಯುವುದೂ ಇಲ್ಲ. ಗಿಡಗಳು ಬೆಳೆದಂತೆ ನಮಗೆ ಬೇಕಾದ ಹಾಗೆ ಅವುಗಳ ತುದಿ ಕತ್ತರಿಸಬಹುದು. ಇನ್ನೊಂದು ವಿಶೇಷವೆಂದರೆ ಬೌಗೆನ್ವಿಲ್ಲಾ ಗಿಡಕ್ಕೆ ಕೀಟಗಳು ತೊಂದರೆ ಕೊಡಲಾರವು. ಕೀಟಮುಕ್ತ ಗಿಡವೆಂದೇ ಹೇಳಬಹುದು. ಆದರೆ ಅಪರೂಪಕ್ಕೆಂಬಂತೆ ಬಸವನ ಹುಳ, ಪತಂಗಗಳು ಅವು ಗಳನ್ನು ತಮ್ಮ ಆಹಾರಕ್ಕಾಗಿ ತಿನ್ನುವುದುಂಟು.

    ಅವುಗಳ ಔಷಧೀಯ ಉಪಯೋಗಗಳನ್ನು ನೋಡುತ್ತ ಹೋದರೆ ಆಶ್ಚರ್ಯವಾಗುತ್ತದೆ. ನಮ್ಮ ದೇಹ ನಿರ್ಜಲೀ ಕರಣಗೊಳ್ಳುವುದನ್ನು ಕಾಗದದ ಹೂವು ತಡೆಯುತ್ತದೆ. ನೆರಳೆ ಬೌಗೆನ್ವಿಲ್ಲಾ ಹೂವುಗಳ ಚಹಾವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ಕೆಲವು ವಿಷಕಾರಿ ಅಂಶಗಳನ್ನು ಹೊರ ಹಾಕುತ್ತವೆ. ಅಲ್ಲದೆ ಮಧುಮೇಹ, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ, ಪದೇಪದೇ ಕಾಡುತ್ತಿರುವ ಜ್ವರ, ಹೊಟ್ಟೆ ನೋವು, ಕೀಲು ನೋವುಗಳನ್ನು ಗುಣಪಡಿಸುವಲ್ಲಿ ಇದರ ಕಷಾಯ ಮತ್ತು ಚಹಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಆದರೆ ಇದರ ಚಹಾ ಅಥವಾ ಕಷಾಯವನ್ನು ಸೇವಿಸುವ ಮುನ್ನ ನೀವು ನಿಮ್ಮ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

    ವಿಶ್ವದ ತುಂಬೆಲ್ಲಾ ಹರಡಿದೆ ನಮ್ಮ ಕೇಪುಳ!

  • ವಿಶ್ವದ ತುಂಬೆಲ್ಲಾ ಹರಡಿದೆ ನಮ್ಮ ಕೇಪುಳ (red ixora)!

    ವಿಶ್ವದ ತುಂಬೆಲ್ಲಾ ಹರಡಿದೆ ನಮ್ಮ ಕೇಪುಳ (red ixora)!

    ಈಶ ಗಿರೀಶ ನರೇಶ ಪರೇಶ ಮಹೇಶ ಬಿಲೇಶಯಭೂಷಣ ಭೋ|
    ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್||

    ಆಹಾ… ಶಿವನ ಧ್ಯಾನಿಸುವುದರಲ್ಲಿ ಸಿಗುವ ಆನಂದಕ್ಕೆ ಎಲ್ಲೆಯುಂಟೆ. ಕಣ್ಣುಮುಚ್ಚಿ ಶಿವನನ್ನು ಧ್ಯಾನಿಸಿ, ಕಣ್ಣು ತೆರೆದರೆ ಕೆಂಪು ಹೂವಿನ ರಾಶಿಯಲ್ಲಿ ಶಿವನೂ ತನ್ಮಯತೆಯಿಂದ ಕಣ್ಣು ಮುಚ್ಚಿ ಕೂತಿರಬಹುದೇ ಅನಿಸುತ್ತದೆ. ಶಿವನಿಗೆ ಈ ಹೂವೆಂದರೆ ಅಷ್ಟೊಂದು ಪ್ರಿಯ.

    ಶಿವನ ಪಾದ ಸೇರಲೆಂದೇ ಬಿಡುವ ಹೂವು

    ಶಿವನ ಪಾದ ಸೇರಲೆಂದೇ ಬಿಡುವ ಹೂವು ಯಾವುದೆಂದಿರಾ? ಅದೇ ಕೇಪಳ. ಹೌದು, ಗೊಂಚಲು ಗೊಂಚಲಾಗಿರುವ, ಕೈತೋಟ, ಕಾಡು-ಗುಡ್ಡಗಳಲ್ಲಿ ಯತೇಚ್ಛವಾಗಿ ಬೆಳೆಯುವ ಈ ಹೂವು ಎಲ್ಲರ ಮನ ಸೆಳೆಯುತ್ತದೆ.

    jungle flame

    ಕೇಪುಳದ ಕೆಂಪು ಬಣ್ಣದಿಂದಾಗಿ ಇದಕ್ಕೆ ಜಂಗಲ್ ಫ್ಲೇಮ್ ಎನ್ನುತ್ತಾರೆ

    ಕನ್ನಡದಲ್ಲಿ ಕೇಪುಳ ಅಥವಾ ಗುಡ್ಡಾ ದಾಸಲಾ, ಕೊಂಕಣಯಲ್ಲಿ ಪಟ್ಕಾಲಿ ಅಥವಾ ಪೊಡ್ಕಲಿ, ಮಲಯಾಳಂನಲ್ಲಿ ಸೆಕ್ಕಿ ಅಥವಾ ಚೆಟ್ಟಿ, ತೆಲುಗಿನಲ್ಲಿ ಬಂಧುಕಾ ಅಥವಾ ಬಂಧು ಜೀವಕಮು, ಇಂಗ್ಲೀಷಿನಲ್ಲಿ ಜಂಗಲ್ ಜರೇನಿಯಮ್ ಅಥವಾ ಜಂಗಲ್ ಫ್ಲೇಮ್ ಎಂದು ಕರೆಸಿಕೊಳ್ಳುವ ಈ ಹೂವು ಬಾಗಶಃ ಜಗತ್ತಿನ ಎಲ್ಲಾ ಭಾಗಗಳಲ್ಲೂ ನೋಡಸಿಗುತ್ತದೆ. ಭಾರತ, ಶ್ರೀಲಂಕಾ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್ ಮತ್ತು ಥೈಲ್ಯಾಂಡ್‌ನಲ್ಲಿ ಕೇಪುಳವನ್ನು ವ್ಯಾಪಕವಾಗಿ ಬೆಳೆಯುತ್ತಾರೆ.

    ಕೇಪುಳದ ವೈಜ್ಞಾನಿಕ ಹೆಸರು ಇಕ್ಸೋರ ಕೊಸಿನಿಯ

    ಕೇಪುಳ ಗಿಡದ ವೈಜ್ಞಾನಿಕ ಹೆಸರು ಇಕ್ಸೋರ ಕೊಸಿನಿಯ (ಲಿನ್). ಇದು ರುಬಿಯಾಸಿಯ ವರ್ಗಕ್ಕೆ ಸೇರಿದ್ದಾಗಿದ್ದು ಸುಮಾರು ಐದು ನೂರು ಪ್ರಭೇದಗಳಿದ್ದರೂ ಬೆರಳೆಣಿಕೆಯಷ್ಟನ್ನು ಮಾತ್ರ ಬೆಳಸಲಾಗುತ್ತದೆ. ಇದು ಸಾವಯವ ಪದಾರ್ಥಗಳಿಂದ ಸಮೃದ್ಧವಾಗಿರುವ ಬೆಳಕು ಚೆನ್ನಾಗಿ ರುವ, ಫಲವತ್ತಾದ, ಆಮ್ಲ ಮಣ್ಣಿನಲ್ಲಿ ಬೆಚ್ಚಗಿನ ಹವಾಮಾನದಲ್ಲಿ ಪ್ರಾಕೃತಿಕವಾಗಿ ಬೆಳೆಯುತ್ತದೆ. ಇದನ್ನು ಮನೆಯ ಒಳಗೂ ಮಡಕೆ, ಕಂಟೇನರ್‌ಗಳಲ್ಲಿಯೂ ಬೆಳೆಸಬಹುದು.

    ಎಲೆಗಳು ಕಾಂಡಕ್ಕೆ ಅಂಟಿಕೊಂಡಿರುತ್ತವೆ

    ಕೇಪುಳ ಗಿಡ ಸುಮಾರು ೪ರಿಂದ ೬ ಅಡಿ ಎತ್ತರ ಬೆಳೆಯುತ್ತದೆ. ಕೆಲವೊಮ್ಮೆ ಹವಾಮಾನಕ್ಕನುಗುಣವಾಗಿ ೧೨ ಅಡಿ ಎತ್ತರಕ್ಕೂ ಬೆಳೆಯಬಲ್ಲದು. ಗಿಡ ಕವಲು ಕವಲಾಗಿ ಬೆಳೆದು ನೋಡಲು ಪೊದೆಯ ತರಹ ಕಾಣುತ್ತದೆ. ಕಾಂಡದ ಪ್ರತಿ ಜಾಯಿಂಟ್‌ನಲ್ಲಿ ಎದುರು ಬದುರಾಗಿರುವ ಎರಡು ಎಲೆಗಳನ್ನು ಕಾಣಬಹುದು. ಎಲೆಗಳು ಕಡು ಹಸಿರು ಬಣ್ಣದಲ್ಲಿದ್ದು ಹೊಳಪನ್ನು ಹೊಂದಿವೆ. ವಿಶೇಷ ಅಂದರೆ ಎಲೆಗಳು ತೊಟ್ಟುಗಳನ್ನು ಹೊಂದದೆ, ಕಾಂಡಕ್ಕೆ ಅಂಟಿಕೊಂಡಿರುತ್ತವೆ. ಎಲೆಗಳಿಂದ ಕೂಡಿದ ಕಾಂಡದ ಕೊನೆಯಲ್ಲಿ ಗುಂಪುಗುಂಪಾಗಿ ಹೂವುಗಳು ಅರಳುತ್ತವೆ. ಪ್ರತಿಯೊಂದೂ ಹೂವಿನಲ್ಲಿ ಸಾಮಾನ್ಯವಾಗಿ ನಾಲ್ಕು ದಳಗಳಿರುತ್ತವೆ. ಆದರೆ ಕೆಲವೊಂದು ಪ್ರಭೇದಗಳಲ್ಲಿ ದಳಗಳ ಸಂಖ್ಯೆ ಹೆಚ್ಚಿರಬಹದು. ಹೂವುಗಳ ದಳಗಳು ಚೂಪಾಗಿದ್ದು ಮೂರರಿಂದ ಎಂಟು ಸೆಂಟೀಮೀಟರ್ ಉದ್ದ ಮತ್ತು ಎರಡೂವರೆಯಿದ ಮೂರೂವರೆ ಸೆಂಟಿಮೀಟರ್ ಅಗಲವಿರುತ್ತದೆ. ಈ ಹೂವುಗಳು ಕೆಂಪು, ಹಳದಿ, ಗುಲಾಬಿ, ಬಿಳಿ ಹಾಗೂ ಕಿತ್ತಳೆ ಬಣ್ಣಗಳಲ್ಲಿ ಕಂಡು ಬರುತ್ತವೆ.

    ಹಣ್ಣುಗಳು ಸಿಹಿ ಹಾಗೂ ಚೊಗರು!

    ಕಾಯಿಗಳು ಸುಮಾರು ಅರ್ಧಸೆಂಟಿಮೀಟರ್ ಗೋಲಾಕಾರದಲ್ಲಿ ಇದ್ದು ಗೊಂಚಲುಗಳಾಗಿಯೇ ಬೆಳೆಯುತ್ತವೆ. ನಿಧಾನವಾಗಿ ಪಕ್ವವಾಗು ತ್ತಿದ್ದಂತೆ ಹಸಿರು ಕಾಯಿಗಳು ಕೆಂಪು ಅಥವಾ ನೇರಳೆ-ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹಣ್ಣುಗಳು ಸಿಹಿ ಹಾಗೂ ಚೊಗರು ರುಚಿಯನ್ನು ಹೊಂದಿರುತ್ತವೆ. ಪ್ರತಿ ಹಣ್ಣಿನಲ್ಲಿ ಎರಡು ಬೀಜಗಳಿವೆ. ಇನ್ನು ಹಳ್ಳಿಗಳಲ್ಲಿ ಮಕ್ಕಳು ಈ ಹಣ್ಣುಗಳ ರುಚಿಯನ್ನು ಸವಿಯದೇ ಇರಲಾರರು.

    ಕೇಪುಳದ ಔಷಧೀಯ ಗುಣಗಳು!

    ಹೂವುಗಳು, ಎಲೆಗಳು, ಬೇರುಗಳು ಮತ್ತು ಕಾಂಡವನ್ನು ಭಾರತೀಯ ಸಾಂಪ್ರದಾಯಿಕ ಔಷಧ ಪದ್ಧತಿ, ಆಯುರ್ವೇದ ಔಷಧಿಗಳಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಮಕ್ಕಳ ಮೂತ್ರದಲ್ಲಿ ಧಾತು ಹೋಗುವದನ್ನು ತಡೆಯಲು ಬಿಳಿ ಕೇಪುಳ ಹೂವಿನ ಗಿಡದ ಬೇರನ್ನು ನೀರಿನಲ್ಲಿ ತೇದು ನಲವತ್ತೈದು ದಿನ ಮಕ್ಕಳಿಗೆ ಕುಡಿಸುತ್ತಾರೆ. ಇದಲ್ಲದೆ ಉರಗೆ ಗಡ್ಡೆ ಮತ್ತು ಕೇಪುಳ ಗಿಡದ ಬೇರುಗಳ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಕಷಾಯ ಮಾಡಿ ಮಕ್ಕಳಿಗೆ ಕುಡಿಸುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಮಕ್ಕಳಿಗೆ ಕಜ್ಜಿ, ಮೈ ತುರಿಕೆಯಿದ್ದಾಗ ಹೂವಿನ ಕೇಸರವನ್ನು ತೆಗೆದು ಹಾಕಿ ಹೂವನ್ನು ತೊಳೆದು ತೊಳದ ಮೊಗ್ಗು, ಕಾಯಿ ಹೂವುಗಳನ್ನು ಕೂಡಿಸಿ ಜಜ್ಜಿ, ರಸವನ್ನು ಹಿಂಡಿ ಅರ್ಧದಿಂದ ಒಂದು ಚಮಚ ಕುಡಿಸಿದರೆ ಕಜ್ಜಿ, ತುರಿಕೆಗಳು ಕಡಿಮೆಯಾಗುತ್ತವೆ. ಅಲ್ಲದೆ ಕೂದಲೆಣ್ಣೆ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. ಇಷ್ಟೇ ಅಲ್ಲದೆ ನೋವು, ಮೂಲವ್ಯಾಧಿ, ಕರುಗಳಲ್ಲಿನ ಸೆಳೆತ, ಗರ್ಭಾಶಯದ ತೊಂದರೆಗಳ್ನು ನಿವಾರಿಸುವಲ್ಲಿ ಈ ಕೇಪುಳ ಸಹಾಯ ಮಾಡುತ್ತದೆ. ಹಳ್ಳಿಗಳಲ್ಲಿ ಕೇಪುಳ ಗಿಡದ ಮೊಗ್ಗು ಹಾಗೂ ಚಿಗುರುಗಳಿಂದ ಮಾಡಿದ ಚಟ್ನಿ, ತಂಬುಳಿ ಇದ್ದರೆ ಊಟದ ರುಚಿಯೇ ಬೇರೆ.

    ಮೊದಲೇ ಹೇಳಿದ ಹಾಗೆ ಈಶ್ವರನಿಗೆ ಪ್ರಿಯವಾದ ಹೂವಾದ್ದರಿಂದ ಇದಕ್ಕೆ ಇಕ್ಸೋರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಇಷ್ಟೆಲ್ಲಾ ಪವಿತ್ರವಾದ, ಔಷಧಯುಕ್ತವಾದ ಅಮೂಲ್ಯ ಸಸ್ಯವನ್ನು ಬೆಳೆದು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ?

  • ಔಷಧಿಗಳ ಖಣಜ ಈ ಪಾರಿಜಾತ (parijatha)!

    ಔಷಧಿಗಳ ಖಣಜ ಈ ಪಾರಿಜಾತ (parijatha)!

    ನೀ ಸಂಜೆ ಹೊರ ಬರಬೇಡ
    ಸೂರ್ಯ ಮುಳುಗೋದೇ ಮರೆತೋದ
    ನಾ ಬರೆಯೋದೆ ಕಲಿತಿಲ್ಲ
    ಕವಿಯೇ ಆದೆ ಕಣೆ ನಿನ್ನಿಂದ…

    ಏನು ಕವನ ಬರಿತೀದಿನಿ ಅಂದ್ಕೊಂಡ್ರಾ? ಇಲ್ಲ. ಮತ್ತೇನು? ಗೊತ್ತಾಗ್ಲಿಲ್ವಾ? ಇದು ದಿಂಗಂತ್-ಐಂದ್ರಿತಾ ರೈ ನಟಿಸಿರುವ ’ಪಾರಿಜಾತ’ ‘parijatha’ ಚಿತ್ರದ ಗೀತೆ ಅನ್ನಿಸ್ತಿದೆಯಾ? ರೈಟ್, ನಿಮ್ಮ ಅನಿಸಿಕೆ ಸರಿ. ಹೂವಿನ ಬಗ್ಗೆ ಹೇಳೋಕೆ ಹೊರಟವನು ಯಾಕೆ ಈ ಕವಿತೆ? ಅಲ್ಲೇ ಇದೆ ವಿಶೇಷ. ಈ ಕಥೆ ’ಪಾರಿಜಾತ’ದ ಸುತ್ತಲೇ ಇದೆ. ಅದೇ ಪಾರಿಜಾತ ಹೂವು. ಸಿನೆಮಾ, ಹಾಡು, ಕಥೆ, ನಾಟಕ, ಕಷಾಯ, ಪೂಜೆ ಎಲ್ಲೆಲ್ಲೂ ಈ ಪಾರಿಜಾತವೇ ಇದೆ. ಶ್ರೀ ಕೃಷ್ಣ ಪಾರಿಜಾತ ಎಂಬುದು ಉತ್ತರ ಕರ್ನಾಟಕದ ಜನಪ್ರಿಯ ಬೈಲಾಟಗಳಲ್ಲಿ ಒಂದು.

    ಸೂರ್ಯಾಸ್ತದ ಸಮಯದಲ್ಲಿ ಅರಳುವ ಹೂವು

    ಅದಿರಲಿ, ಪಾರಿಜಾತ (parijatha)ಹೂವಿನ ಬಗ್ಗೆ ಬರೋಣ. ಮೈತುಂಬಾ ಬಿಳಿ ಹೂವನ್ನು ಹೊದ್ದು ನಿಂತಿರುವ ಈ ಪಾರಿಜಾತ ಗಿಡವನ್ನು ನೀವೆಲ್ಲರೂ ನೋಡಿರುತ್ತೀರಿ. ನಿಮ್ಮ ಮನೆಯ ಹಿತ್ತಿಲಿನಲ್ಲೂ ಇರಬಹುದು. ಏಳೆಂಟು ಬಿಳಿ ಬಣ್ಣದ ಎಸಳುಗಳನ್ನು ಹೊಂದಿರುವ ಈ ಹೂವು ಬೀರುವ ಸುಗಂಧವನ್ನು ಆಘ್ರಾಣಿಸಲು ನಿಂತರೆ ಸಮಯ ಸರಿದದ್ದೆ ಗೊತ್ತಾಗುವುದಿಲ್ಲ. ಹೂವೆಂದರೆ ಸಾಮಾನ್ಯವಾಗಿ ಬೆಳ್ಳಂಬೆಳಗ್ಗೆ ಅರಳಿ ನಿಂತಿರುತ್ತವೆ. ಆದರೆ ಪಾರಿಜಾತ (parijatha) ಹೂವು ಮಾತ್ರ ಇದಕ್ಕೆ ವಿರುದ್ಧ. ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ಪಾರಿಜಾತ (parijatha) ಹೂವು ಅರಳ ತೊಡಗುತ್ತವೆ. ಅದಕ್ಕೇ ಇದನ್ನು ನೈಟ್ ಬ್ಲೂಮಿಂಗ್ ಜಾಸ್ಮೀನ್ ಎಂದು ಕರೆಯುವುದು. ಸೂರ್ಯಾಸ್ತದ ಸಮಯದಲ್ಲಿ ಅರಳುವ ಹೂವು ಬೆಳಗಾಗುವುದರೊಳಗೆ ಉದುರಿ ಅಂಗಳದ ತುಂಬೆಲ್ಲಾ ರಂಗೋಲಿ ಹಾಕಿರುತ್ತದೆ.

    ಪಾರಿಜಾತ(parijatha)ಕ್ಕಿದೆ ಪುರಾಣದ ನಂಟು!

    ಈ ಹೂವಿಗೂ ಪುರಾಣಕ್ಕೂ ನಂಟಿದೆ. ಸಾಕ್ಷಾತ್ ಶ್ರೀ ಕೃಷ್ಣ ತನ್ನ ಪ್ರಿಯತಮೆ ಸತ್ಯಭಾಮೆಗೋಸ್ಕರ ಸ್ವರ್ಗದಿಂದ ಭೂಲೋಕಕ್ಕೆ ಪಾರಿಜಾತದ ವೃಕ್ಷವನ್ನು ತಂದಿದ್ದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇನ್ನೊಂದು ಕಥೆಯ ಪ್ರಕಾರ ಸಮುದ್ರ ಮಥನ ಕಾಲದಲ್ಲಿ ಕ್ಷೀರ ಸಾಗರದಿಂದ ಹುಟ್ಟಿ ಬಂದ ಐದು ವೃಕ್ಷಗಳ ಪೈಕಿ ಈ ಪಾರಿಜಾತ ವೃಕ್ಷವೂ ಒಂದೆಂದು ಹೇಳಲಾಗುತ್ತದೆ.

    ಪಾರಿಜಾತದ ವೈಜ್ಞಾನಿಕ ಹೆಸರು ನೈಕ್ಟಾಂಥೆಸ್ ಆರ್ಬರ್-ಟ್ರಿಸ್ಟಿಸ್

    ಪಾರಿಜಾತದ ವೈಜ್ಞಾನಿಕ ಹೆಸರು ನೈಕ್ಟಾಂಥೆಸ್ ಆರ್ಬರ್-ಟ್ರಿಸ್ಟಿಸ್. ಇದು ಒಲಿಯಾಸೀ ಕುಟುಂಬಕ್ಕೆ ಸೇರಿದ್ದು. ಪಾರಿಜಾತವು ಒಂದು ಪೊದೆಸಸ್ಯ ಅಥವಾ ಸಣ್ಣ ಮರವಾಗಿದ್ದು, ೧೦ ಮೀ ಎತ್ತರಕ್ಕೆ ಬೆಳೆಯುತ್ತದೆ, ಚಪ್ಪಟೆ ಬೂದು ತೊಗಟೆ ಇರುತ್ತದೆ. ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಬೆಳೆಯುವ ಇದರ ಎಲೆಗಳು ಸುಮಾರು ಆರರಿಂದ ಹನ್ನೆರಡು ಸೆಂಟಿಮೀಟರ್ ಉದ್ದ ಮತ್ತು ಎರಡರಿಂದ ಆರು ಸೆಂಟಿಮೀಟರ್ ಅಗಲವಾಗಿರುತ್ತವೆ. ಸುಮಾರು ಐದರಿಂದ ಎಂಟು ಪಕಳೆಗಳನ್ನು ಹೊಂದಿರುವ ಹೂವು ಬಿಳಿಯ ಬಣ್ಣದ್ದಾಗಿದ್ದು ಮಧ್ಯದಲ್ಲಿ ಕಿತ್ತಳೆ ಮತ್ತು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಪಾರಿಜಾತ ಹೂವು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೂವಾಗಿದೆ. ಇಲ್ಲಿ ಇದನ್ನು ಪರಿಜಾತ್, ಶೆಫಾಲಿ ಮತ್ತು ಸಿಯುಲಿ ಎಂದೂ ಕರೆಯುತ್ತಾರೆ. ಬಿಹಾರದಲ್ಲಿ ಹರ್-ಶೃಂಗಾರ್, ಅಸ್ಸಾಮೀಸ್‌ನಲ್ಲಿ ಕ್ಸೆವಾಲೀ, ಶ್ರೀಲಂಕಾದಲ್ಲಿ ಇದನ್ನು ಸೆಪಾಲಿಕಾ, ಕೇರಳದಲ್ಲಿ ಪವಿಜಮಲ್ಲಿ-ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಪಾರಿಜಾತ ಜಮ್ಮು-ಕಾಶ್ಮೀರದಲ್ಲಿ, ಹಿಮಾಲಯ, ಅಸ್ಸಾಂನ ಪೂರ್ವ, ಬಂಗಾಳ, ತ್ರಿಪುರದಿಂದ ದಕ್ಷಿಣದ ಗೋದಾವರಿಯವರೆಗೆ ಕಂಡು ಬರುತ್ತದೆ. ಭಾರತ ಮಾತ್ರವಲ್ಲದೆ ಥೈಲ್ಯಾಂಡ್, ನೇಪಾಳ, ಇಂಡೋನೇಷ್ಯಾ ಮತ್ತು ಪಾಕಿಸ್ತಾನದಲ್ಲೂ ಪಾರಿಜಾತ ಹೂವುಗಳನ್ನು ಕಾಣಬಹುದು.

    ರೋಗಿಗಳ ಪಾಲಿನ ಕಲ್ಪವೃಕ್ಷ

    ಪೂಜೆಗಳಲ್ಲಿ ಬಳಸುವ ಶ್ರೇಷ್ಟ ಹೂವು ಪಾರಿಜಾತ. ದೇವರಿಗೆ ಅರ್ಪಿಸುವ ಎಲ್ಲ ಹೂವುಗಳನ್ನು ಗಿಡದಿಂದಲೇ ನೇರವಾಗಿ ಕೋಯ್ದು ತಂದರೆ, ಪಾರಿಜಾತವನ್ನು ಮಾತ್ರ ನೆಲದಲ್ಲಿ ಬಿದ್ದ ಮೇಲೆ ಆರಿಸಿಕೊಂಡು ಬಳಸುತ್ತಾರೆ.
    ಈ ಪಾರಿಜಾತ ರೋಗಿಗಳ ಪಾಲಿಗೆ ಕಲ್ಪವೃಕ್ಷವೂ ಹೌದು. ಸಂಸ್ಕೃತದಲ್ಲಿ ಶೆಫಾಲಿಕಾ ಎಂದು ಕರೆಸಿಕೊಳ್ಳುವ ಹೂವು, ಎಲೆಗಳಲ್ಲಿ ಔಷಧೀಯ ಗುಣಗಳಿವೆ. ನಮ್ಮನ್ನು ಬೆಂಬಿಡದೆ ಕಾಡುವ ಕೀಲುನೋವಿಗೆ ಪಾರಿಜಾತದ ಎಲೆಗಳಿಂದ ತಯಾರಿಸಿದ ಕಷಾಯ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಮಲಬದ್ಧತೆಯಿಂದ ಬಳಲುವವರು ಕೂಡಾ ಈ ಕಷಾಯವನ್ನು ಉಪಯೋಗಿಸಬಹುದು.

    ಅಲ್ಲದೆ ಈ ಕಷಾಯದಿಂದ ಜಂತು ಹುಳು ಬಾಧೆ ಹಾಗೂ ಕೆಮ್ಮನ್ನು ಹತೋಟಿಗೆ ತರಬಹುದು. ಪಾರಿಜಾತದ ಬೀಜಗಳಿಂದ ಮಾಡಿದ ಔಷಧಿಯನ್ನು ಜಾಂಡೀಸ್ ನಿವಾರಣೆಯಲ್ಲಿ ಬಳಸಲಾಗುತ್ತದೆ. ಪಾರಿಜಾತದ ಎಲೆಯ ಪೇಸ್ಟ್ ಅನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಪಾರಿಜಾತದ ಹೂವಿನ ಪರಿಮಳ ನಮ್ಮನ್ನು ಕಾಡುವ ತಲೆನೋವನ್ನು ಗಾಯಬ್ ಮಾಡುತ್ತದೆ. ಜೊತೆಗೆ ಪರಿಮಳ ಯುಕ್ತ ಹೂವನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲೂ ಬಳಸುತ್ತಾರೆ. ಅಲ್ಲದೆ ನಮ್ಮನ್ನು ಕಾಡುವ ಅನೇಕ ತರಹದ ಜ್ವರವನ್ನು ಗುಣಪಡಿಸಲು ಪಾರಿಜಾತವನ್ನು ಬಳಸುತ್ತಾರೆ. ಅಲ್ಲದೆ ಇದು ಅಜೀರ್ಣ ಮತ್ತು ಮಲಬದ್ಧತೆಯಂತಹ ಕರುಳಿನ ಸಂಬಂಧಿತ ಕಾಯಿಲೆಗಳಿಗೆ ರಾಮಬಾಣ. ಉಫ್! ಪಾರಿಜಾತದ ಔಷಧೀಯ ಗುಣಗಳು ಇಷ್ಟಕ್ಕೇ ಮುಗಿಯುವುದಿಲ್ಲ. ಬರೆಯುತ್ತಾ ಹೋದರೆ ಇನ್ನೂ ಎರಡು ಮೂರು ವಾರಗಳೇ ಬೇಕಾಗಬಹುದು.

    ಇಷ್ಟೆಲ್ಲಾ ಉಪಯೋಗವಿರುವ ಈ ಪಾರಿಜಾತ ಹೂವು ಎಲ್ಲಾ ಕಾಲದಲ್ಲೂ ಲಭ್ಯವಿರುವುದಿಲ್ಲ. ಕೇವಲ ಜುಲೈ ತಿಂಗಳಿನಿಂದ ನವೆಂಬರ್ ವರೆಗೆ ಮಾತ್ರ ಅರಳುವ ಈ ಹೂವಿನ ಗಿಡ ನಮ್ಮ ತೋಟದಲ್ಲಿ ಇದ್ದರೆ ನಮಗೇ ಒಳ್ಳೆಯದಲ್ಲವೇ?

  • ರಾಪ್ಲೆಸಿಯಾ ಎಂಬ ಶವದ ಹೂವು!

    ರಾಪ್ಲೆಸಿಯಾ ಎಂಬ ಶವದ ಹೂವು!

    ಶವದ ಹೂವುಗಳು. ಹೌದು, ನೀವು ಓದುತ್ತಿರುವುದು ನಿಜ. ಶವದ ಹೂವುಗಳೇ… ಟೈಟನ್ ಅರುಮ್, ಅಮಾರ್ಫಾಲಸ್ ಮತ್ತು ರಾಪ್ಲೆಸಿಯಾ ಅರ್ನಾಲ್ಡಿ ಈ ಮೂರು ಹೂವುಗಳು ಶವದ ಹೂವುಗಳೆಂದು ಕರೆಯಲ್ಪಟ್ಟಿವೆ.
    ರಾಪ್ಲೆಸಿಯಾ ಅರ್ನಾಲ್ಡಿ ವಿಶ್ವದ ಅತಿದೊಡ್ಡ ಹೂವುಗಳಲ್ಲಿ ಒಂದೆನಿಸಿಕೊಂಡಿದೆ. ಇವು ಇಂಡೋನೇಷಿಯಾದ ಸುಮಾತ್ರಾ ಮತ್ತು ಬೊರ್ನಿಯಾದ ದಟ್ಟ ಮಳೆಕಾಡುಗಳಲ್ಲಿ ಅರಳುತ್ತವೆ. ವಿಶೇಷ ಅಂದರೆ ಇಂಡೋನೇಷಿಯಾದ ರಾಷ್ಟ್ರೀಯ ಹೂವುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ಅಲ್ಲಿಯ ಸಂರಕ್ಷಿತ ಹೂವಿನ ಪ್ರಬೇಧಗಳಲ್ಲಿಯೂ ಒಂದೆನಿಸಿದೆ.

    ಇನ್ನು ರಾಪ್ಲೆಸಿಯಾ ಕೆಂಪು ಮತ್ತು ಕಂದು ಬಣ್ಣದ್ದಾಗಿದ್ದು, ಸುಮಾರು ೧೦೦ ಸೆಂಟಿಮೇಟರ್ ಅಗಲವಾಗಿರುತ್ತದೆ. ಅತಿ ಹೆಚ್ಚು ಅಂದರೆ ೧೦೫ ಸೆಂಟಿಮೀಟರ್‌ಗಳಷ್ಟು ಅಗಲದ ಹೂವುಗಳು ಕಂಡು ಬಂದಿವೆ. ರಾಪ್ಲೆಸಿಯಾ ಹೂವು ಐದು ದಳಗಳಿಂದ ಕೂಡಿದ್ದು, ಪ್ರತಿ ದಳವು ಸುಮಾರು ೩೦ ಸೆಂಟಿ ಮೀಟರ್‌ಗಳಷ್ಟು ಅಗಲವಿರುತ್ತವೆ. ಮಧ್ಯದಲ್ಲಿ ತಟ್ಟೆಯಾಕಾರದ ಒಂದು ಡಿಸ್ಕ್ ಥರ ಇರುತ್ತದೆ. ಅದರ ಮೇಲೆ ಇರುವ ಚೂಪಾದ ಮುಳ್ಳುಗಳಂತಹ ಆಕೃತಿ ಪರಾಗಸ್ಪರ್ಶಕ್ಕೆ ಸಹಕಾರಿಯಾಗಿರುತ್ತದೆ.

    ರಾಪ್ಲೆಸಿಯಾ ಒಂದು ಪರಾವಲಂಬಿ ಹೂವು!

    ಬೆಳೆಯಲು ನಾಳಿಯ ಸಸ್ಯಗಳನ್ನು ಅವಲಂಭಿಸಿದೆ. ವಿಚಿತ್ರ ಅಂದರೆ ರಾಪ್ಲೆಸಿಯಾ ಎಲೆ, ಕಾಂಡ, ಬೇರು ಯಾವುದನ್ನೂ ಹೊಂದಿರದ ಒಂದು ಹೂವೂ ಹೌದು, ಸಸ್ಯವೂ ಹೌದು. ಬೀಜದಿಂದ ಮೊಗ್ಗಾಗಿ ಬೆಳೆಯಲು ಇದು ಕೆಲವು ತಿಂಗಳುಗಳಿಂದ ವರ್ಷಗಟ್ಟಲೆ ತೆಗೆದುಕೊಂಡು ಕೆಲವು ದಿನಗಳಲ್ಲಿ ಹೂವಾಗಿ ಅರಳುತ್ತದೆ. ಆದರೆ ಅದೇ ಹೂವು ಕೆಲವೇ ಕೆಲವು ಅಂದರೆ ಒಂದು ವಾರಗಳಷ್ಟು ಮಾತ್ರ ಅರಳಿರುತ್ತವೆ. ನಂತರ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯಲಾರಭಿಸುತ್ತವೆ.

    ರಾಪ್ಲೆಸಿಯಾ ಕೆಟ್ಟ ದುರ್ನಾಥ ಬೀರುತ್ತದೆ!

    ಅರಳಿದ ಹೂವು ಸುವಾಸನೆ ಬೀರಬೇಕಲ್ಲವೇ? ಆದರೆ ರಾಪ್ಲೆಸಿಯಾ ಇದಕ್ಕೆ ತದ್ವಿರುದ್ಧ. ಮೊಗ್ಗಿನಿಂದಲೇ ತನ್ನ ಸುತ್ತ ಯಾರೂ ಬರದಂತಹ ಕೆಟ್ಟ ದುರ್ನಾಥ ಬೀರುತ್ತದೆ. ಅದೂ ಎಂತಹ ವಾಸನೆ ಅಂತೀರಾ? ಕೊಳೆತ ಶವದಿಂದ ಬರುವ ಕೆಟ್ಟ ವಾಸನೆ. ಅದರಿಂದಾಗೇ ಇದಕ್ಕೆ ಶವದ ಹೂವು ಎಂಬ ಹೆಸರು ಬಂದಿದೆ.

    ಕೀಟಗಳೇ ಪರಾಗ ಸ್ಪರ್ಶದ ವಾಹಕಗಳು!

    ಇರಲಿ, ಇದರ ಸಂತಾನೋತ್ಪತ್ತ ಹೇಗಾಗಬಹುದು ಎಂಬ ಕುತೂಹಲ ಸಹಜ. ಅರಳಿದ ಹೂವಿನಲ್ಲಿ ತಟ್ಟೆಯಂತಹ ರಚನೆ ಆಗುತ್ತದೆ ಎಂದು ಹೇಳಿದೆನಲ್ಲವೇ? ಇದೇ ಪರಾಗಸ್ಪರ್ಶಕ್ಕೆ ಸಹಕಾರಿಯಾದ ಭಾಗ. ಈ ಹೂವಿನ ಸುತ್ತ ಯಾವುದೇ ಪಕ್ಷಿಗಳು ಸುತ್ತದಿದ್ದರೂ ನೊಣ, ಜೀರುಂಡೆಗಳಂತಹ ಕೀಟಗಳು ಈ ಹೂವಿನ ಆಕರ್ಷಣೆಗೆ ಒಳಗಾಗುತ್ತವೆ. ಈ ಕೀಟಗಳೇ ಪರಾಗ ಸ್ಪರ್ಶದ ವಾಹಕಗಳು. ಪರಾಗಸ್ಪರ್ಶದ ನಂತರ ಹಸಿಮಾಂಸದ ತರಹ ಗುಂಡಗಿನ ಹಣ್ಣಾಗುತ್ತದೆ. ಈ ಹಣ್ಣು ದೊಡ್ಡ ಮಟ್ಟದಲ್ಲಿ ಗಟ್ಟಿ ಕವಚ ಹೊಂದಿರುವ ಬೀಜಗಳನ್ನು ಹೊಂದಿರುತ್ತದೆ. ಈ ಬೀಜಗಳನ್ನು ಆಗ್ನೇಯ ಏಷ್ಯಾದ ಬೊರ್ನಿಯಾದಲ್ಲಿ ಕಂಡು ಬರುವ ಅಳಿಲಿನಂತಹ ಸಣ್ಣ ಸಸ್ತನಿಗಳು ತಿಂದು ಪರಿಸರದಲ್ಲಿ ಹರಡುತ್ತವೆ. ಇವೇ ಮತ್ತೆ ಮಳೆಗಾಲದಲ್ಲಿ ರೆಪ್ಲಿಸಿಯಾ ಮೊಗ್ಗುಗಳಾಗಿ ಹೂವಿನ ಹಂತ ತಲುಪುತ್ತವೆ.

    ಎನರ್ಜಿ ಡ್ರಿಂಕ್ಸ್ ಹಾಗೂ ಕಾಮೋತ್ತೇಜಕ…

    ಇಷ್ಟು ದುರ್ಗಂಧ ಬೀರುವ ಹೂವಿನಿಂದ ಏನಾದರೂ ಉಪಯೋಗವಿದೆಯೇ ಎಂಬ ಸಂದೇಹ ಬರುವುದು ಸಹಜ. ಇದರಿಂದಲೂ ಉಪಯೋಗವಿದೆ. ಇದನ್ನು ಮಲೇಷ್ಯಾದಲ್ಲಿ ಮಹಿಳೆಯರು ಋತುಚಕ್ರದ ಸಮಯದಲ್ಲಿ ಆಗುವ ರಕ್ತಸ್ರಾವ ನಿಲ್ಲಿಸಲು ಹಾಗೂ ಹೆರಿಗೆಯ ನಂತರ ಗರ್ಭಕೋಶ ಕುಗ್ಗಿಸಲು ಇದನ್ನು ಔಷಧ ರೂಪದಲ್ಲಿ ಉಪಯೋಗಿಸುತ್ತಾರೆ. ಪುರುಷರೂ ಕೂಡಾ ಇದನ್ನು ಎನರ್ಜಿ ಡ್ರಿಂಕ್ಸ್ ಹಾಗೂ ಕಾಮೋತ್ತೇಜಕವಾಗಿ ಉಪಯೋಗಿಸುವುದುಂಟು. ಅಲ್ಲದೇ ಥಾಯ್ ಸನ್ಯಾಸಿಗಳೂ ಕೂಡಾ ಇದನ್ನು ವಿವಿಧ ರೀತಿಯಲ್ಲಿ ಉಪಯೋಗಿಸುತ್ತಾರೆಂಬ ಪ್ರತೀತಿಯಿದೆ.

  • ಸಂಜೆ ಮಲ್ಲಿಗೆ (Mirabilis Jalapa) ಎಂಬ ಸಂಜೀವಿನಿ!

    ಸಂಜೆ ಮಲ್ಲಿಗೆ (Mirabilis Jalapa) ಎಂಬ ಸಂಜೀವಿನಿ!

    ಪ್ರೇಮವಿದೆ ಮನದೆ ನಗುತ ನಲಿವಾ ಹೂವಾಗಿ
    ಬಂದೆ ಇಲ್ಲಿಗೆ… ನಾ ಸಂಜೆ ಮಲ್ಲಿಗೆ… ನಾ ಸಂಜೆ ಮಲ್ಲಿಗೆ

    ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಸೂಜಿ ಮಲ್ಲಿಗೆ ಮುಂತಾದ ಹೂವಿನ ರೀತಿಯಲ್ಲಿಯೇ ಇದರ ಹೆಸರು ಸಂಜೆ ಮಲ್ಲಿಗೆ ಅಂತಿದ್ದರೂ, ಇದು ಎಲ್ಲಕ್ಕಿಂತ ಭಿನ್ನ. ಸಾಮಾನ್ಯವಾಗಿ ಎಲ್ಲ ಹೂವುಗಳು ಬೆಳಗ್ಗೆ ಅರಳಿದರೂ ಈ ಸಂಜೆ ಮಲ್ಲಿಗೆ (Mirabilis Jalapa) ಮಾತ್ರ ಅರಳುವುದು ಸಾಯಂಕಾಲ ನಾಲ್ಕು ಗಂಟೆಗೆ. ಅದಕ್ಕಾಗಿಯೇ ಈ ಹೂವಿಗೆ ನಾಲ್ಕು ಗಂಟೆ ಹೂವು, ಸಂಜೆ ಮಲ್ಲಿಗೆ ಎಂಬ ಹೆಸರು ಬಂದಿದೆ. ಅದರ ಜೀವಿತಾವಧಿ ಕೂಡ ಕಡಿಮೆಯೇ. ಸೂರ್ಯೋದಯದ ವೇಳೆಗೆ ಹೂವು ಮುದುಡಿ, ಉದುರುತ್ತದೆ.

    ಒಂದೇ ಹೂವು ಬೇರೆ ಬೇರೆ ರೀತಿಯ ಬಣ್ಣ

    ಸಂಜೆ ಮಲ್ಲಿಗೆ ಗಿಡಗಳು ಹೆಚ್ಚಾಗಿ ಮಳೆಗಾಲದಲ್ಲಿ ಕಾಣಸಿಗುತ್ತವೆ. ಬೀಜ ಮೊಳಕೆಯೊಡೆದು ಒಂದೆರಡು ತಿಂಗಳಲ್ಲಿ ಸೊಂಪಾಗಿ ಬೆಳೆದ ಗಿಡಗಳು ಹೂವು ಬಿಡಲು ಪ್ರಾರಂಭಿಸುತ್ತವೆ. ಸಂಜೆ ಮಲ್ಲಿಗೆ (Mirabilis Jalapa) ಯ ಕುತೂಹಲಕರ ಅಂಶವೆಂದರೆ ವಿವಿಧ ಬಣ್ಣಗಳ ಹೂವುಗಳು ಒಂದೇ ಗಿಡದಲ್ಲಿ ಏಕಕಾಲದಲ್ಲಿ ಕಂಡು ಬರುತ್ತವೆ. ಅಲ್ಲದೆ ಒಂದೇ ಹೂವು ಬೇರೆ ಬೇರೆ ರೀತಿಯ ಬಣ್ಣಗಳಿಂದ ಕೂಡಿರುತ್ತದೆ. ಈ ಹೂವುಗಳು ಬಿಳಿ, ಹಳದಿ, ಕೆಂಪು, ಗುಲಾಬಿ, ನಸು ಗುಲಾಬಿ, ಪಿಂಕ್, ಗಾಢ ಹಳದಿ, ಬಿಳಿ-ಕೆಂಪಿನ ಮಿಶ್ರಣ ಹೀಗೆ ಹಲವು ಬಣ್ಣಗಳಲ್ಲಿ ಅರಳುತ್ತವೆ.

    ಸಂಜೆ ಮಲ್ಲಿಗೆಯ ವಿವಿಧ ಹೆಸರುಗಳು!

    ಕನ್ನಡದಲ್ಲಿ ಗುಳಮಾಜಿ, ಮದ್ದೆಮಲ್ಲಿಗೆ, ವಿಭೂತಿ ಗಿಡ, ಭೂರುದ್ರಾಕ್ಷಿ ಎಂದೆಲ್ಲಾ ಕರೆಸಿಕೊಳ್ಳುವ ಸಂಜೆ ಮಲ್ಲಿಗೆಯ ಮೂಲ ದಕ್ಷಿಣ ಅಮೆರಿಕಾ. ಆದರೆ ಈ ಸಂಜೆ ಮಲ್ಲಿಗೆ ಜಗತ್ತಿನ ನಾನಾ ದೇಶಗಳಲ್ಲಿ ಅರಳುತ್ತದೆ. ಪಾಕಿಸ್ತಾನದಲ್ಲಿ ಇದನ್ನು ಹಂಡ್ರಿರಿಕಾ ಎನ್ನುತ್ತಾರೆ. ಬುಲೇರಿಯಾದಲ್ಲಿ ನಶ್ಟನ ಕ್ರಾಶ್ರಾವಿಕಾ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತದೆ. ಮೆಕ್ಸಿಕೊದಲ್ಲಿ ಮರವಲ್ಲ ಎಂದು ಕರೆಸಿಕೊಳ್ಳುವ ಸಂಜೆ ಮಲ್ಲಿಗೆ ಬಾಂಗ್ಲಾದೇಶದಲ್ಲಿ ಸಂಧ್ಯಮಲತಿ ಎಂಬ ಹೆಸರು ಹೊಂದಿದೆ. ತಮಿಳುನಾಡಿನಲ್ಲಿ ಅಂದಿ ಮಂದಾರೈ, ಆಂಧ್ರಪ್ರದೇಶಿನಲ್ಲಿ ಚಂದ್ರಕಾಂತ, ಇಂದ್ರಗಾಂತಿ, ಕೇರಳಲ್ಲಿ ನಾಲುಮನಿ ಮಾವು, ಮಹಾರಾಷ್ಟ್ರದಲ್ಲಿ ಗುಲಾಬಕ್ಷೀ, ಅಸ್ಸಾಮಿನಲ್ಲಿ ಗೋದುಲಿ ಗೋಪಾಲ್, ಒರಿಯಾದಲ್ಲಿ ರಂಗಾನಿ, ಸಂಸ್ಕೃತದಲ್ಲಿ ಕೃಷ್ಣಕೇಳಿ, ಎಂದೆಲ್ಲ ಕರೆಸಿಕೊಳ್ಳುವ ಸಂಜೆ ಮಲ್ಲಿಗೆ ಉಷ್ಣವಲಯದ ಬೆಚ್ಚಗಿನ ಹವಾಮಾನದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ಸಸ್ಯದ ಮೇಲೆ ಸೂರ್ಯನ ಬೆಳಕು ಬಿದ್ದಾಗ ಹಸಿರಾಗಿ ನಳನಳಿಸಲಾರಂಭಿಸುತ್ತದೆ.

    ವೈಜ್ಞಾನಿಕ ಹೆಸರು ಮಿರಾಬಿಲಿಸ್ ಜಲಪ (Mirabilis Jalapa)

    ನೈಕ್ಟಾಗಿನೇಶಿಯ ಕುಟುಂಬಕ್ಕೆ ಸೇರಿದ ಸಂಜೆ ಮಲ್ಲಿಗೆ ಗಿಡದ ವೈಜ್ಞಾನಿಕ ಹೆಸರು ಮಿರಾಬಿಲಿಸ್ ಜಲಪ. ಮಿರಾಬಿಲಿಸ್ ಎಂದರೆ ಅದ್ಬುತ ಎಂದರ್ಥ.ಉತ್ತರ ಅಮೇರಿಕಾದಲ್ಲಿ ’ಜಲಪ’ ಊರಿನ ಹೆಸರು. ಇವೆರಡು ಸೇರಿ ಈ ಹೂವಿಗೆ ಮಿರಾಬಿಲಿಸ್ ಜಲಪ ಎಂಬ ಹೆಸರು ಬಂದಿರಬಹುಡು. ಪಾಳು ಭೂಮಿ, ರಸ್ತೆ ಬದಿಯಲ್ಲಿ ಹೆಚ್ಚಾಗಿ ಕಂಡು ಬರುವ ಸಂಜೆ ಮಲ್ಲಿಗೆ ಗಿಡ ಸುಮಾರು ಒಂದು ಮೀಟರ್ ಬೆಳೆಯಬಲ್ಲ ಸಸ್ಯವಾಗಿದ್ದು ಹಲವಾರು ಕಲವುಗಳನ್ನು ಹೊಂದಿದ್ದು, ಪೊದೆಗಳಂತೆ ಕಂಡು ಬರುತ್ತವೆ. ಸುಮಾರು ಹತ್ತು ಸೆಂಟಿಮೀಟರ್ ಉದ್ದ ಹಾಗೂ ಆರರಿಂದ ಏಳು ಸೆಂಟಿಮೀಟರ್‌ಗಳಷ್ಟು ಅಗಲದ, ಹೃದಯಾಕಾರದ ಕಡು ಹಸಿರು ಬಣ್ಣದ ಎಲೆಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಇರುತ್ತವೆ. ಕಾಂಡದ ಕೊನೆಯಲ್ಲಿ ಅರಳುವ ದುಂಡಗಿನ ಹೂವುಗಳು ಸಾಮಾನ್ಯವಾಗಿ ಐದು ದಳಗಳನ್ನು ಹೊಂದಿರುತ್ತವೆ. ಹೂವುಗಳು ಉದುರಿದ ಜಾಗದಲ್ಲಿ ಹಸಿರು ಬಣ್ಣದ ಮೊಗ್ಗಿನಾಕಾರದ ಮಧ್ಯದಲ್ಲಿ ಬೀಜಗಳು ಅಡಗಿರುತ್ತವೆ. ದಿನಕಳೆದಂತೆ ಬೀಜಗಳು ಕಪ್ಪು ಬಣ್ಣಕ್ಕೆ ತಿರುಗಿ ಉದುರಿ ಹೋಗುತ್ತವೆ. ನೋಡಲು ಕಾಳು ಮೆಣಸಿನಂತೆ ಕಾಣುವ ಬೀಜಗಳು ಮತ್ತೆ ಮಳೆಗಾಲ ಪ್ರಾರಂಭವಾದಾಗ ಮೊಳಕೆಯೊಡೆಯುತ್ತವೆ.

    ಸಂಜೆ ಮಲ್ಲಿಗೆಯ ಔಷಧೀಯ ಗುಣ!

    ಈ ಸಂಜೆ ಮಲ್ಲಿಗೆ ಗಿಡದ ಬೇರು, ಎಲೆ, ಹೂವು ಎಲ್ಲವೂ ಯಥೇಚ್ಚವಾಗಿ ಔಷಧೀಯ ಗುಣಗಳನ್ನು ಹೊಂದಿದೆ. ಹಸಿರು ಎಲೆಗಳನ್ನು ಅರೆದು ಗಾಯಗಳ ಮೇಲೆ ಹಚ್ಚುವುದರಿಂದ ಗಾಯಗಳಿಂದ ಗುಣಮುಖರಾಗಬಹುದು. ಅಲ್ಲದೆ ಈ ಪೇಸ್ಟ್ ಹಚ್ಚುವುದರಿಂದ ತುರಿಕೆ, ನವೆ ಮುಂತಾದ ಚರ್ಮರೋಗಗಳು ಗುಣವಾಗುತ್ತವೆ. ಉಗುರು ಸುತ್ತಿನ ಸಮಸ್ಯೆಯಿರುವವರು ಎಲೆ ಅಥವಾ ಬೇರನ್ನು ಅರೆದು, ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಕೆಲ ದಿನಗಳ ವರೆಗೆ ಹಚ್ಚುವುದರಿಂದ ಉಗುರು ಸುತ್ತು ಕಡಿಮೆಯಾಗುತ್ತದೆ. ಹೂವುಗಳನ್ನು ಆಹಾರಕ್ಕೆ ಬಣ್ಣ ಬರಲು ಬಳಸುತ್ತಾರೆ. ಕೇಕ್ ಮತ್ತು ಜೆಲ್ಲಿಗಳಿಗೆ ಬರುವ ಕಡು ಗೆಂಪು ಬಣ್ಣವನ್ನು ಸಂಜೆ ಮಲ್ಲಿಗೆ ಹೂವುಗಳಿಂದಲೆ ಪಡೆಯಲಾಗುತ್ತದೆ. ಕೆಲವು ಪ್ರಭೇದಗಳ ಬೀಜವನ್ನು ಸೌಂದರ್ಯವರ್ಧಕ ಮತ್ತು ಬಣ್ಣವಾಗಿ ಬಳಸಲಾಗುತ್ತದೆ. ಸಸ್ಯದ ಕಷಾಯವನ್ನು ಭೇದಿ, ಸೋಂಕಿತ ಗಾಯಗಳು ಮತ್ತು ಜೇನುನೊಣ ಮತ್ತು ಚೇಳು ಕಚ್ಚಿದಾಗ ಬಳಸಲಾಗುತ್ತದೆ. ಹೂವುಗಳ ರಸವನ್ನು ಕಿವಿನೋವು, ಅತಿಸಾರ, ಭೇದಿ, ಸಿಫಿಲಿಸ್ ಮತ್ತು ಪಿತ್ತಜನಕಾಂಗದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇಷ್ಟೆಲ್ಲ ಉಪಯೋಗಗಳಿರುವ ಈ ಹೂವಿನ ಗಿಡಗಳನ್ನು ಕಳೆಗಿಡದಂತೆ ಕಾಣುವುದು ಮಾತ್ರ ವಿಷಾಧನೀಯ.